ಬಿ. ಆರ್. ಶೇಷಾದ್ರಿ, 'ಜಗದೋದ್ಧಾರನ, ಆಡಿಸಿದಳೆಶೋದೆ' ಎಂಬ ಜನಪ್ರಿಯ ಗೀತೆಯನ್ನು ಹಾಡಿ, ಮೈಸೂರಿನ ಮನೆ-ಮನೆಗಳಲ್ಲಿ ಪ್ರಸಿದ್ಧರಾಗಿದ್ದ ಗಾನಕಲಾಭೂಷಣ ಬಿ.ಎಸ್.ರಾಜಯ್ಯಂಗಾರ್ ರವರ ಮಗ. ರಾಜಯ್ಯಂಗಾರ್ ಅಭಿನಯದಲ್ಲೂ ಕೈಯ್ಯಾಡಿಸಿದ್ದರು. ತಂದೆಯಿಂದ ಇಂತಹ ಪಾರಂಪಾರಿಕ ಕಲೆಗಳಿಂದ ಪ್ರಭಾವಿತರಾಗಿದ್ದ ಶೇಷಾದ್ರಿ, ಲಯ-ವಾದ್ಯ ಸಂಗೀತದ ಬಗ್ಗೆ ತಮ್ಮ ಹೆಚ್ಚಿನ ಗಮನಹರಿಸಿದರು. == ಜನನ, ಸಂಗೀತ ಕಲಿಕೆ == 'ಕರ್ನಾಟಕ ಶಾಸ್ತ್ರೀಯ ಸಂಗೀತದ ದಿಗ್ಗಜ'ರಾಗಿದ್ದ , ಬಿ. ಎಸ್. ರಾಜಯ್ಯಂಗಾರ್ ಮಗನಾಗಿ ೧೯೨೮ ರಲ್ಲಿ ಜನಿಸಿದರು. 'ಸಿ. ಕೆ. ಅಯ್ಯಾ ಮಣಿ'ಯವರ ಹತ್ತಿರ 'ಲಯವಾದ್ಯ ಸಂಗೀತ' ಪಾಠವನ್ನು ಪ್ರಾರಂಭಿಸಿದರು. ಮುಂದೆ ಈ ಕಲಾಪ್ರಕಾರದ ಬಗ್ಗೆ ಹೆಚ್ಚಿನ ವ್ಯಾಸಂಗವನ್ನು ನರಸಿಂಹಯ್ಯ , ಪಾಲಕ್ಕಾಡು ಕುಂಜಮಣಿ, ಎಚ್. ಪುಟ್ಟಾಚಾರ್ಯ ರ ಬಳಿ ಮಾಡಿದರು. ನೃತ್ಯ ಮೇಳಗಳಲ್ಲಿ ಭಾಗವಹಿಸಿ ಸುಪ್ರಸಿದ್ದ ನೃತ್ಯ ಪಟುಗಳಾಗಿದ್ದ 'ಇಂದ್ರಾಣಿ ರೆಹಮಾನ್' ರಿಗೆ ಮೃದಂಗ ನುಡಿಸಿದರು. 'ಇಂದ್ರಾಣಿ ರೆಹಮಾನ್ ತಂಡ'ದ ಜೊತೆಗೆ ಯೂರೊಪ್, ಇಂಗ್ಲೆಂಡ್, ಅಮೇರಿಕ, ಇರಾನ್, ಆಫ್ಗಾನಿಸ್ತಾನ್, ರಷ್ಯಾಗಳಲ್ಲಿ ಕಾರ್ಯಕ್ರಮನೀಡಿ ಮೆರೆದಿದ್ದಾರೆ. ಹಲವು, 'ಭಾರತನಾಟ್ಯ ಸಂಯೋಜನೆ'ಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. 'ಸುಗಮ ಸಂಗೀತ ಕಾರ್ಯಕ್ರಮ'ಕ್ಕೆ 'ತಬಲಾ ಸಂಗತಿ'ಯನ್ನು ನೀಡಿ ಸಹಕರಿಸಿದ್ದಾರೆ. 'ರಂಗ ಭೂಮಿ', ಮತ್ತು 'ಚಲನಚಿತ್ರ'ಗಳಲ್ಲೂ ಪ್ರಯೋಗ ಮಾಡಿ ಜಯಶಾಲಿಯಾಗಿದ್ದಾರೆ. == ಪ್ರಶಸ್ತಿಗಳು == 'ಶಾಂತಲಾ ಪ್ರಶಸ್ತಿ' ೧೯೯೧- ೯೨ ರ ಸಾಲಿನ 'ಕರ್ನಾಟಕ ಸಂಗೀತ ನೃತ್ಯ ಅಕ್ಯಾಡೆಮಿ ಪ್ರಶಸ್ತಿ ವಿಜೇತರು'. 'ಕರ್ನಾಟಕ ಕಲಾ ತಿಲಕ ಗೌರವ' ಬಿರುದನ್ನೂ ಗಳಿಸಿದ್ದಾರೆ.